ದುನಿಯಾ ವಿಜಯ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಹೆಚ್ಚು ಕಮ್ಮಿ ಒಟ್ಟೊಟ್ಟಿಗೆ ಚಿತ್ರರಂಗಕ್ಕೆ ಬಂದವರು. 'ಮುಂಗಾರುಮಳೆ' ಚಿತ್ರದಿಂದ ಗಣಿ ದೊಡ್ಡ ಸಕ್ಸಸ್ ಕಂಡರೆ 2 ತಿಂಗಳ ಅಂತರದಲ್ಲಿ 'ದುನಿಯಾ' ಸಿನಿಮಾ ಮಾಡಿ ವಿಜಯ್ ಗೆದ್ದಿದ್ದರು. ಇದೀಗ ಇಬ್ಬರ ಹೊಸ ಸಿನಿಮಾಗಳು ಒಂದು ವಾರದ ಅಂತರದಲ್ಲಿ ತೆರೆಗೆ ಬರ್ತಿದೆ.
ಶ್ರೀನಿವಾಸ್ ಪ್ರಭು ನಿರ್ದೇಶನದಲ್ಲಿ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಸಿನಿಮಾ ಒಂದು ವಾರ ಮುಂದೆ ರಿಲೀಸ್ ಆಗಲಿದೆ. ವಿಜಿ-ಗಣಿ ಇಬ್ಬರೂ ಮೊದಲಿನಿಂದಲೂ ಆತ್ಮೀಯ ಸ್ನೇಹಿತರು. ಇಬ್ಬರೂ ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಬಂದವರು. ಸಾಕಷ್ಟು ಸಂಕಷ್ಟ ಎದುರಿಸಿ ಬಳಿಕ ಹೀರೊ ಆಗಿ ಗೆದ್ದವರು.