ಅದ್ಯಾವ ಘಳಿಗೆಯಲ್ಲಿ ಕರಿಚಿರತೆ ದುನಿಯಾ ವಿಜಯ್ ''ಭೀಮ'' ಚಿತ್ರವನ್ನು ಘೋಷಿಸಿದರೋ, ಆವತ್ತಿನಿಂದಲೇ ಈ ಸಿನಿಮಾದ ಬಗ್ಗೆ ಗಾಂಧಿನಗರದಲ್ಲಿ ಮಾತ್ರ ಅಲ್ಲ ಚಿತ್ರ ಪ್ರೇಕ್ಷಕರಲ್ಲಿ ಕೂಡ ಕುತೂಹಲ ಗರಿಗೇದರಿತ್ತು. ''ಸಲಗ'' ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದ ದುನಿಯಾ ವಿಜಿ ಅಲಿಯಾಸ್ ವಿಜಯ್ ಕುಮಾರ್, ಈ ಬಾರಿ ಅದ್ಯಾವ ಮ್ಯಾಜಿಕ್ ಮಾಡ್ತಾರೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡಲು ಶುರುವಾಯಿತು.
ಇದಕ್ಕೆ ಪೂರಕವಾಗಿ ಒಂದಾದ ಮೇಲೊಂದರಂತೆ ಹಾಡುಗಳೆಲ್ಲ ಸದ್ದು ಮಾಡಲು ಶುರು ಮಾಡಿದವು. ಚಿತ್ರದ ಮೇಲಿನ ನಿರೀಕ್ಷೆಯನ್ನೂ ಹೆಚ್ಚಿಸಿದವು. ಇನ್ನೇನು.. ಕೆಲವೇ ದಿನ ಸಲಗ ವಿಜಯ್ ಕುಮಾರ್ ಬದುಕಿನ ಮತ್ತೊಂದು ಪರೀಕ್ಷೆಯ ಫಲಿತಾಂಶ ಹೊರ ಬರಲಿದೆಯಾದರೂ, ಭೀಮನ ಬೆನ್ನನ್ನೂ ಕನ್ನಡ ಚಿತ್ರರಂಗದ ಸೆಂಚ್ಯೂರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ತಟ್ಟಿದ್ದಾರೆ. ವಿಜಯ್ ಅವರ ಶ್ರಮವನ್ನು ಕೊಂಡಾಡಿದ್ದಾರೆ. ದುನಿಯಾ ಚಿತ್ರವನ್ನೂ ನೆನಪು ಮಾಡಿಕೊಂಡಿದ್ದಾರೆ.