ಒಂದು ಕಡೆ ದರ್ಶನ್ ಜೈಲಿನಲ್ಲಿದ್ದಾರೆ. ಮತ್ತೊಂದು ಕಡೆ ಅವರ ನಲ್ಮೆಯ ಸ್ನೇಹಿತ-ಸಹೋದರ ತರುಣ್ ಸುಧೀರ್ ಮದುವೆಯ ಸಂಭ್ರಮದಲ್ಲಿದ್ದಾರೆ. ಸಹಜವಾಗಿ ತರುಣ್ ಮತ್ತು ಸೋನಾಲ್ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಲು ಸಾಧ್ಯವಾಗದ ಕಾರಣ ದರ್ಶನ್ ಅವರಿಗೆ ಬೇಸರ ಇದ್ದೇ ಇರುತ್ತೆ. ಸಂಭ್ರಮದಲ್ಲಿ ದರ್ಶನ್ ಭಾಗಿಯಾಗಲ್ಲವಲ್ಲ ಎಂಬ ಕೊರಗು ತರುಣ್ ಸುಧೀರ್ ಅವರನ್ನು ಕಾಡುತ್ತಿರುತ್ತೆ.
ಆದರೂ.. ಮದುವೆ ಮುಂದೂಡಲು ಆಗಲ್ಲ. ಯಾಕೆಂದರೆ.. ಖುದ್ದು ದರ್ಶನ್ ಅವರೇ ''ಯಾವುದೇ ಕಾರಣಕ್ಕೂ ಮದುವೆಯ ದಿನಾಂಕ ಮುಂದೂಡಬೇಡ'' ಎಂದು ತರುಣ್ ಅವರಿಗೆ ಹೇಳಿದ್ದಾರೆ. ಹೀಗಾಗಿಯೇ ಸೋನಾಲ್ ಜೊತೆ ಹಸೆಮಣೆ ಏರಲು ಸಿದ್ಧವಾದ ತರುಣ್, ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ನೀಡಿದ್ದಾರೆ. ಮೊದಲ ಇನ್ವಿಟೇಶನ್ ಕಾರ್ಡ್ ನ ವಿಜಯಲಕ್ಷ್ಮೀ ಅವರಿಗೆ ಕೊಟ್ಟು, ಆನಂತರ ಮದುವೆಯ ಮಮತೆಯ ಕರೆಯೋಲೆಯನ್ನು ಚಿತ್ರರಂಗದಲ್ಲಿನ ತಮ್ಮ ಸ್ನೇಹಿತರಿಗೆ ತಮ್ಮ ಸಹುದ್ಯೋಗಿಗಳಿಗೆ ನೀಡಲು ಶುರು ಮಾಡಿದ್ದಾರೆ. ಖುದ್ದು ತರುಣ್ ಈ ವಿಚಾರವನ್ನು ಮಾಧ್ಯಮದವರ ಮುಂದೆ ಹಂಚಿಕೊಂಡಿದ್ದಾರೆ.