ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ. ಕ್ಲಾಸ್, ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಅನ್ನುವಂಥಾ ಮನಸ್ಥಿತಿ ಅವರದ್ದು. ಬಹುಶಃ ರಾಜ್ಕುಮಾರ್ ಅವರನ್ನು ಬಿಟ್ಟರೆ ಶಿವಣ್ಣನಷ್ಟು ವೆರೈಟಿ ಪಾತ್ರಗಳನ್ನು ಮಾಡಿದ, ಹೊಸಾ ಪ್ರಯೋಗಗಳಿಗೂ ಒಗ್ಗಿಕೊಂಡ ಮತ್ತೋರ್ವ ನಟ ಶಿವರಾಜ್ ಕುಮಾರ್. ಅವರ ಈ ಕಲರ್ಫುಲ್ ಸಿನಿ ಜರ್ನಿಗೆ ಕಳಶಪ್ರಾಯವಾಗೋ ಎಲ್ಲ ಸಾಧ್ಯತೆಗಳನ್ನೂ ಹೊಂದಿದ್ದ ಸತ್ಯ ಮಂಗಳ ಸಿನಿಮಾ ಶಿವರಾಜ್ ಕುಮಾರ್ ನಟಿಸುತ್ತಿರೋ ಸಾಲು ಸಾಲು ಚಿತ್ರಗಳ ಗದ್ದಲದ ನಡುವೆ ಅದೇಕೋ ಮರೆಯಾಗಿದ್ದು ಮಾತ್ರ ದುರದೃಷ್ಟಕರ.
ಹೌದು, ನಿಮಗೆ ನೆನಪಿದ್ದರೆ, 2021ರಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚಿತ್ರವೊಂದರ ಘೋಷಣೆಯಾಗಿತ್ತು. ಚಿತ್ರದ ಶೀರ್ಷಿಕೆ ಮತ್ತು ಟೈಟಲ್ ಪೋಸ್ಟರ್ ತೀವೃ ಕುತೂಹಲವನ್ನೂ ಕೆರಳಿಸಿತ್ತು. ಆ ಚಿತ್ರದ ಹೆಸರೇ ಸತ್ಯಮಂಗಳ. ತೀರಾ ಸಣ್ಣ ವಯಸ್ಸಿಗೇ ನಿರ್ದೇಶಕ ಅನ್ನಿಸಿಕೊಂಡ ಮಮ್ಮಿ ಮತ್ತು ದೇವಕಿ ಎನ್ನುವ ಎರಡು ಚಿತ್ರಗಳ ಮೂಲಕ ಎಲ್ರನ್ನೂ ನಿಬ್ಬೇರಗಾಗಿಸಿದ್ದ ಲೋಹಿತ್ ಈ ಚಿತ್ರದ ನಿರ್ದೇಶನದ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದರು. ಚುರುಕು ಸ್ವಭಾವ, ಲವಲವಿಕೆ, ಕ್ರಿಯಾಶೀಲತೆ, ಸ್ನೇಹಶೀಲ ಗುಣದಿಂದ ಸಿನಿಮಾರಂಗದ ಎಲ್ಲರಿಗೂ ಪರಿಚಯವಿರುವ ಲೋಹಿತ್ ಅವರಿಗೆ ಈ ಹಿಂದೆ ದಯವಿಟ್ಟು ಗಮನಿಸಿ ಎನ್ನುವ ಚೆಂದದ ಸಿನಿಮಾ ನಿರ್ಮಿಸಿ ಆ ನಂತರ ಶಿವಣ್ಣ ಅಭಿನಯದ ಬೈರಾಗಿ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದ ಕೃಷ್ಣ ಸಾರ್ಥಕ್ ನಿರ್ಮಾಪಕರಾಗಿ ಜೊತೆಯಾಗಿದ್ದರು.