''ಚೇತನ್'' ಗೊತ್ತಲ್ಲಾ.. ? ''ಆ ದಿನಗಳು'' ಚಿತ್ರದ ಮೂಲಕ ಹೆಸರು ಮಾಡಿ ಹೀರೋ ಅನ್ನಿಸಿಕೊಂಡವರು. ಬಹುಶಃ ಆ ದಿನಗಳು ತಂದುಕೊಟ್ಟ ಕೀರ್ತಿಯನ್ನು ಚೇತನ್ ಸರಿಯಾಗಿ ಬಳಸಿಕೊಂಡಿದ್ದಿದ್ದರೆ ಈಷ್ಟೊತ್ತಿಗೆ ಕನ್ನಡದ ಪ್ರಮುಖ ಹೀರೋಗಳಲ್ಲಿ ನಿಸ್ಸಂಶಯವಾಗಿ ಚೇತನ್ ಒಬ್ಬರಾಗುತ್ತಿದ್ದರು.
ಆದರೆ, ಚೇತನ್ ತಮ್ಮ ಟ್ರ್ಯಾಕ್ ಬದಲಿಸಿದರು. ಅಮೆರಿಕದಲ್ಲಿ ಹುಟ್ಟಿಬೆಳೆದು ಬಂದ ಚೇತನ್ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡು ಪ್ರಗತಿಪರ ಚಿಂತಕರಾದರು. ಭಾಷಣ ಮಾಡುವುದನ್ನೂ ಕಲಿತರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಅಂಜದೇ ಅಳುಕದೇ ಹೇಳಲು ಶುರು ಮಾಡಿದರು. ಬಲಪಂಥೀಯರ ಕೆಂಗಣ್ಣಿಗೆ ಗುರಿಯಾದರು. ಎರಡೆರಡು ಬಾರಿ ಜೈಲಿಗೆ ಕೂಡ ಹೋಗಿ ಬಂದರು.