ನೆಲಮಂಗಲ: ಕನ್ನಡ ಚಿತ್ರರಂಗದ ವರನಟಿ ಡಾ. ಲೀಲಾವತಿ ಅಗಲಿ ಒಂದು ವರ್ಷವಾಗುತ್ತಿದೆ. ಕಳೆದ ವರ್ಷ ಡಿಸೆಂಬರ್ 8 ಕ್ಕೆ ಹಿರಿಯ ನಟಿ ಲೀಲಾವತಿ ದೇಹತ್ಯಾಗ ಮಾಡಿದ್ದರು. ಸದಾ ಅಮ್ಮನ ಜೊತೆಯೇ ಇರುತ್ತಿದ್ದ ವಿನೋದ್ ರಾಜ್ ಅವರ ನೆನಪಿನಲ್ಲಿಯೇ ಕಾಲ ಕಳೆಯುವಂತಾಗಿತ್ತು. ಅಮ್ಮನ ಅಗಲಿಕೆ ಬಳಿಕ ಅವರಿಗಾಗಿ ಸ್ಮಾರಕ ನಿರ್ಮಾಣ ಮಾಡಬೇಕು ಅನ್ನೋದು ಆಸೆಯಿತ್ತು. ಅದರಂತೆ ಇಂದು (ಡಿಸೆಂಬರ್ 5) ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಸ್ಮಾರಕವನ್ನು ಲೋಕಾರ್ಪಣೆ ಮಾಡಿದ್ದಾರೆ.
ನೆಲಮಂಗಲ ತಾಲೂಕಿನ ಸೋಲದೇವನ ಹಳ್ಳಿಯಲ್ಲಿರುವ ತೋಟದಲ್ಲಿ ತಾಯಿ ಲೀಲಾವತಿಯವರ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ತಮ್ಮದೇ ಸ್ವಂತ ಖರ್ಚಿನಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದು, 'ತಾಯಿಯೇ ದೇವರು, ವರನಟಿ ಡಾ.ಲೀಲಾವತಿ ದೇಗುಲ' ಎಂದು ಕರೆದಿದ್ದಾರೆ. 'ಲೀಲಾವತಿ ದೇಗುಲ'ವನ್ನು ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟನೆ ಮಾಡಿದ್ದಾರೆ.