ಸ್ಕಂದ ಅಶೋಕ್ ಸಿನಿಮಾ ಹಾಗೂ ಧಾರಾವಾಹಿಯಲ್ಲಿ ಚಿಕ್ಕಮಗಳೂರಿನ ಅಪ್ಪಟ ಕನ್ನಡದ ಪ್ರತಿಭೆ. ಚಿತ್ರರಂಗದ ಹಿನ್ನೆಲೆಯೇ ಇಲ್ಲದೆ ಬಂದ ಇವರನ್ನು ಮಲಯಾಳಂ ಚಿತ್ರರಂಗ ಮೊದಲು ಗುರುತಿಸಿತ್ತು. ಅದೇ ಸಿನಿಮಾವೇ 'ನೋಟ್ ಬುಕ್. ಸ್ಕಂದ ಇಟ್ಟ ಮೊದಲ ಹೆಜ್ಜೆಯೇ ಯಶಸ್ಸು ಕಂಡಿತ್ತು.
ಸ್ಕಂದ ಅಶೋಕ್ ಅವರ ನಟನಾ ಜರ್ನಿ ಒಂದು ರೋಚಕ ಕಥೆ. ಮಲಯಾಳಂನ 'ನೋಟ್ ಬುಕ್' ಸಿನಿಮಾದಲ್ಲಿ ನಟಿಸಿದ ಬಳಿಕ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ನಟಿಸಬೇಕಿತ್ತು. ಕೊನೆಯ ಕ್ಷಣದಲ್ಲಿ ಆ ಪಾತ್ರದಲ್ಲಿ ಯಶ್ ನಟಿಸಿದ್ದರು. ಅಷ್ಟಕ್ಕೂ ಈ ಪಾತ್ರ ಮಿಸ್ ಆಗಿದ್ದೇಗೆ? ಚಿತ್ರರಂಗಕ್ಕೆ ಬಂದಿದ್ದೇಗೆ? ಅನ್ನೋದನ್ನು ಫಿಲ್ಮಿಬೀಟ್ ಕನ್ನಡ ಜೊತೆ ಸ್ಕಂದ ಅಶೋಕ್ ವಿಸ್ತಾರವಾಗಿ ಹಂಚಿಕೊಂಡಿದ್ದಾರೆ.
"ನನ್ನದು ರೈತಾಪಿ ಕುಟುಂಬ. ಕಾಫಿ ತೋಟ, ಮೆಣಸು ತೋಟವಿತ್ತು. ಸುಮಾರು ವರ್ಷಗಳಿಂದ ಅದನ್ನೇ ಮಾಡಿಕೊಂಡು ಬರುತ್ತಿದ್ದರು. ಅಲ್ಲಿಗೆ ಹೋಗಬೇಕು ಅಂತ ಇತ್ತು. ಆದರೆ, ಅದನ್ನು ಬಿಟ್ಟು ಬೇರೆ ಏನಾದರೂ ಮಾಡಬೇಕು ಅಂತ ಇತ್ತು ತಲೆಯಲ್ಲಿ. ಹಾಗಾಗಿ 17 ವರ್ಷವಿರುವಾಗ ನನ್ನ ಫ್ರೆಂಡ್ ಫೋಟೊಗಳನ್ನು ತೆಗೆದಿದ್ದ. ಅವರು ಚಿಕ್ಕಮಗಳೂರಿನವರೇ. ಚೆನ್ನೈನಲ್ಲಿ ಇದ್ದರು. ಅವರ ತಾಯಿ ತ್ರಿಶಾ ಅವರನ್ನೆಲ್ಲ ಚಿತ್ರರಂಗ ಪರಿಚಯಿಸಿದ್ದರು. ಅವರ ಆಫೀಸ್ಗೆ ಮಲಯಾಳಂನ ನೋಟ್ ಬುಕ್ ಡೈರೆಕ್ಟರ್ ಬಂದಿದ್ದರು. ಆಗ ನನ್ನ ಫೋಟೊಗಳನ್ನು ನೋಡಿ ಇವನೇ ಬೇಕು ಅಂತ ನಮ್ಮ ಮನೆಯವರನ್ನು ಒಪ್ಪಿ ಮೊದಲ ಸಿನಿಮಾ ಶುರುವಾಯ್ತು."